ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಆಪ್ತ ಭಾಗವತ ಪುತ್ತಿಗೆ ರಘುರಾಮ ಹೊಳ್ಳ

ಲೇಖಕರು :
ನಾ.ಕಾರ೦ತ, ಪೆರಾಜೆ
ಸೋಮವಾರ, ಜುಲೈ 8 , 2013

ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ಧರ್ಮದೇವತೆಗಳು, ಗದಾಯುದ್ಧ ಪ್ರಸಂಗದ ಕೌರವ, ಭರತಾಗಮನದ ಭರತ, ದ್ರುಪದ ಗರ್ವಭಂಗದ ಏಕಲವ್ಯ, ತ್ರಿಪುರ ಮಥನದ ಚಾರ್ವಾಕ, ಭೌಮಾಸುರ... ಪಾತ್ರಗಳು ರಂಗದಲ್ಲಿ ಮಾತ್ರವಲ್ಲ, ಮನದಲ್ಲೂ ನಿತ್ಯ ಕುಣಿಯುತ್ತವೆ. ಅಭಿನಯ ಮಾಡುತ್ತವೆ. ಮಾತನಾಡುತ್ತವೆ. ಇದರ ಹಿಂದೆ ಪಾತ್ರಧಾರಿಯ ಸಾಮರ್ಥ್ಯದೊಂದಿಗೆ ಭಾಗವತನ ನಿರ್ದೇಶನವೂ ಮಿಳಿತಗೊಂಡಿರುತ್ತದೆ. ಇದು ಅಜ್ಞಾತ. ಒಟ್ಟೂ ಪ್ರದರ್ಶನ ವನ್ನು ಆಕಳಿಸದೆ ಆಸ್ವಾದಿಸಿದರೆ ಮಾತ್ರ ಗೋಚರ.

ಹಾಗಾಗಿಯೇ ಇರ ಬೇಕು, ಇಂತಹ ಪಾತ್ರಗಳನ್ನು ಜ್ಞಾಪಿಸಿಕೊಂಡರೆ ಸಾಕು, ಕಡತೋಕಾ ಮಂಜು ನಾಥ ಭಾಗವತರ ದಿನಮಾನಗಳು ಮಿಂಚಿ ಮರೆಯಾಗುತ್ತವೆ. ಪ್ರಸಂಗ ಸಾಹಿತ್ಯಕ್ಕೆ ಬಾಧಕ ವಾಗದಂತೆ ಭಾಗವತಿಕೆಯಿಂದಲೇ ಕೆಲವೆಡೆ ಪಂಚ್‌ ಸನ್ನಿವೇಶಗಳನ್ನು ರೂಪಿಸಿರು ವುದನ್ನು ನೋಡುತ್ತೇವೆ. ಪಂಚ್‌ ಸನ್ನಿವೇಶಗಳ ಸೃಷ್ಟಿಗೆ ಇವರು ಖ್ಯಾತಿ. ಅವರ ಬಳಿಕ ಅಷ್ಟೇ ಸಮರ್ಥವಾಗಿ ರಂಗದ ಪಡಿಮಂಚವನ್ನು ಏರಿದವರು ಪುತ್ತಿಗೆ ರಘುರಾಮ ಹೊಳ್ಳರು (58).

ಪುತ್ತಿಗೆ ರಘುರಾಮ ಹೊಳ್ಳ
ತಂದೆ ಕೀರ್ತಿಶೇಷ ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರು ಒಂದು ಕಾಲಘಟ್ಟದ ಯಕ್ಷಗಾನದ ದಂತಕತೆಗಳ ಮೂಟೆ. ತಂದೆಗಂಟಿ ಗೊಂಡೇ ಯಕ್ಷಗಾನದ ನಂಟನ್ನು ಅಂಟಿಸಿಕೊಂಡ ಹೊಳ್ಳರಿಗೆ ಮದ್ದಳೆ ಮತ್ತು ಚೆಂಡೆಯತ್ತ ಮೊದಲಾಸಕ್ತಿ. ಮವ್ವಾರು ಕಿಟ್ಟಣ್ಣ ರೈಗಳು ಮತ್ತು ಕುದ್ರೆಕೂಡ್ಲು ರಾಮ ಭಟ್ಟರಂತಹ ಉದ್ಧಾಮ ಗುರುಗಳನ್ನು ಪಡೆದ ರಘುರಾಮರಿಗೆ ತಂದೆಯೇ ಭಾಗವತಿಕೆಗೆ ಗುರು.

ಕರ್ನೂರು ಕೊರಗಪ್ಪರೈಗಳ ನೇತೃತ್ವದ ಕದ್ರಿಮೇಳವು ತುಳು ಪ್ರಸಂಗದ ಪ್ರದರ್ಶನದಲ್ಲಿ ಜನಮಾನಸವನ್ನು ಹೊಕ್ಕ ಕಾಲ. ಆಗ ರಘುರಾಮ ಹೊಳ್ಳರು ಮೇಳದಲ್ಲಿ ಭಾಗವತ. ಗೆಜ್ಜೆಪೂಜೆ ಪ್ರಸಂಗಕ್ಕೆ ಜನಮಾನ್ಯತೆ. ಪ್ರಸಂಗ, ಮೇಳ, ಕಲಾವಿದರಿಗೆ ಕೀರ್ತಿ. ಭಾಗವತ ರಘುರಾಮರು ಫೀನಿಕ್ಸ್‌ ಹಕ್ಕಿಯಂತೆ ಎದ್ದು ಬಂದರು. ಯಕ್ಷಲೋಕದಲ್ಲಿ ಹಾರಿದರು. ಹಲವರ ಹುಬ್ಬು ಮೇಲೇರಿತು. ಬೆನ್ನುತಟ್ಟಿದರು. ಅಂದು ಕೈಹಿಡಿದ ಯಶಲಕ್ಷ್ಮೀಯು ಹೊಳ್ಳರ ಭಾಗವತಿಕೆಯ ಸಿರಿಗೆ ಬೀಸುಹೆಜ್ಜೆ ನೀಡಿದಳು.

ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳವು ಸಮರ್ಥ ಕಲಾವಿದರೊಂದಿಗೆ ಕಡತೋಕ ಭಾಗವತರ ನಿರ್ದೇಶನದಲ್ಲಿ ವಿಜೃಂಭಿಸುತ್ತಿತ್ತು. ಪೂಜ್ಯ ಖಾವಂದರ ಅಪೇಕ್ಷೆಯಂತೆ ರಘುರಾಮ ಹೊಳ್ಳರು ಶ್ರೀ ಧರ್ಮಸ್ಥಳ ಮೇಳಕ್ಕೆ ಭಾಗವತರಾಗಿ ಸೇರ್ಪಡೆಯಾದರು. ಮೇಳದಲ್ಲಾಗ ಪುರಾಣ ಪ್ರಸಂಗಗಳ ಪ್ರದರ್ಶನ, ಪ್ರಬುದ್ಧ ಕಲಾವಿದರು, ಗಟ್ಟಿ ಹಿಮ್ಮೇಳ, ಚಿಕಿತ್ಸಕ ನೋಟದ ಪ್ರೇಕ್ಷಕರು, ತೂಗಿ ಅಳೆದು ಮಾತನಾಡುವ ವಿಮರ್ಶಕರು, ಕಡತೋಕಾ ಭಾಗವತರ ಪ್ರಭಾವಲಯ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆ-ಚೆಂಡೆಯ ಮಿಡಿತ ನುಡಿತಗಳ ಅನುರಣನ... ಇವಿಷ್ಟನ್ನು ಎದುರಿಸುವುದು ರಘುರಾಮರಿಗೆ ಮೊದಲ ಸವಾಲು. ಯಾಕೋ ಸವಾಲುಗಳಿಗೆ ಎದೆಯೊಡ್ಡುವುದು ಹುಟ್ಟು ಗುಣ. ಅಲ್ಲಿಂದ ನಿರಂತರ ಅಧ್ಯಯನ.

ದಿವ೦ಗತ ಕಡತೋಕ ಮ೦ಜುನಾಥ ಭಾಗವತ
ಬಹುಶಃ ಅವರಿಗೆ ರಂಗ ಸವಾಲನ್ನು ಸಮರ್ಥವಾಗಿ ಎದುರಿಸುವ ಗಟ್ಟಿತನ ನೀಡಿರುವುದು ಕದ್ರಿ ಮೇಳದ ಹಿಮ್ಮೇಳ. ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಚೆಂಡೆ, ಮದ್ದಳೆ ಸಾಥಿಯಾಗಿದ್ದು ಹೊಳ್ಳರ ಭಾಗವತಿಕೆ ಯನ್ನು ಹರಿತ ಮಾಡಿದ್ದರು. ""ನಾವು ಹಿಮ್ಮೇಳದಲ್ಲಿ ಮಾಡುತ್ತಿದ್ದ ಹೊಂದಾಣಿಕೆಗಳು ಸ್ವಾರಸ್ಯಕರ. ಚೆಂಡೆಯಲ್ಲಿ ನಾನೇನಾದರೂ ಹೊಸತಾದ ಒಂದು ನಾಟ್ಯದ ಪೆಟ್ಟು ತೆಗೆದುಕೊಟ್ಟರೂ ಅದನ್ನು ಕೂಡಲೇ ಗ್ರಹಿಸಿ, ಅದೇ ರೀತಿ ತಾಳ ಹೊಂದಿಸಿ, ವೇಷಧಾರಿಗೆ ಅವಕಾಶ ಕೊಟ್ಟು, ಅವರ ಪ್ರತಿಭೆ ಎದ್ದು ಕಾಣುವಂತೆ ಮಾಡುತ್ತಿದ್ದರು. ಗೆಜ್ಜೆದ ಪೂಜೆಯು ಜನಾಕರ್ಷಣೆ ಪಡೆದು ದಾಖಲೆ ನಿರ್ಮಿಸಿದ್ದು ಹೊಳ್ಳರ ಭಾಗವತಿಕೆ ಯಲ್ಲಿ...' ಹೊಳ್ಳರ ಬಗೆಗೆ ಮಾಂಬಾಡಿಯವರ ಮನಸ್ಸಿನ ಮಾತು.

ಶ್ರೀ ಧರ್ಮಸ್ಥಳ ಮೇಳದಲ್ಲಿ ರಘುರಾಮರು ಕಡತೋಕಾರ ಭಾಗವತಿಕೆಯ ಪ್ರಖರತೆಗೆ ಮೈಯೊಡ್ಡಿದರೂ ಕರಕಲಾಗಲಿಲ್ಲ. ಬೆಂದು ಹದವಾದರು. ಕ್ಷಣ ಕ್ಷಣವೂ ಮೈಯೆಲ್ಲಾ ಕಣ್ಣಾದರು. ರಂಗಸೂಕ್ಷ್ಮ ಗಳನ್ನು ಅಭ್ಯಸಿಸಿದರು. ಚಿಪ್ಪಾರು ಬಲ್ಲಾಳರ ನುಡಿತಗಳನ್ನು ಬೆರಗು ಕಣ್ಣುಗಳಿಂದ ನೋಡಿದರು. ಚೆಂಡೆ-ಮದ್ದಳೆಯ ನುಡಿತದ ಜ್ಞಾನ ಇದ್ದುದರಿಂದ ಬೆರಗಾಗಲಿಲ್ಲ. ಮೇಳದಲ್ಲಿ ಪೂರ್ವಾರ್ಧ ರಘುರಾಮರ ಪಾಳಿ. ಬಳಿಕ ಕಡತೋಕಾರ ಸರದಿ. ರಘುರಾಮರು ಹಾಡಿ ರಂಗವಿಳಿದ ಬಳಿಕವೂ ರಂಗದ ಗುಂಗು ಉಸಿರಾಡುತ್ತಿತ್ತು.

ಕಡತೋಕಾ ಭಾಗವತರ ನಿವೃತ್ತಿಯ ಬಳಿಕ ಮೇಳದಲ್ಲಿ ಹೊಳ್ಳರು ಮುಖ್ಯ ಭಾಗವತ. ಅಮೃತ ಸೋಮೇಶ್ವರ, ರಾಘವ ನಂಬಿಯಾರ್‌, ಬೊಟ್ಟಿಕೆರೆ ಪುರುಷೋತ್ತಮ ಪೂಂಜರಂತಹ ಹಿರಿಯ ಸಾಹಿತಿಗಳ ಪ್ರಸಂಗಗಳಿಗೆ ಭಾಗವತಿಕೆ ಮತ್ತು ರಂಗಕ್ರಿಯೆಯ ಮೂಲಕ ಹೊಸ ಸಾಧ್ಯತೆಗಳನ್ನು ತೋರಿದ್ದರು. ಯಕ್ಷಾಸಕ್ತರು ಪ್ರದರ್ಶನಗಳಿಗೆ ಮುಗಿಬೀಳುವಷ್ಟು ಪ್ರಸಂಗಗಳೂ ಜನಪ್ರಿಯವಾದುವು.

ಇವರ ಭಾಗವತಿಕೆಯಲ್ಲಿ ವೇಷ ಮಾಡುವುದು, ತಾಳಮದ್ದಳೆ ಯಲ್ಲಿ ಅರ್ಥ ಹೇಳುವುದು ನಿರಾಯಾಸ. ಯಾಕೆಂದರೆ ಅವರೂ ನಿರಾಯಾಸವಾಗಿ ರಂಗದಲ್ಲಿರುತ್ತಾರೆ. ಪಾತ್ರದೊಂದಿಗೆ ತಾನೂ ಪಾತ್ರವಾಗುತ್ತಾರೆ. ಹೊಳ್ಳರ ಪದ್ಯಗಳಿಗೆ ಒಮ್ಮೆ ಕಿವಿಯಾದರೆ ಅವ್ಯಕ್ತ ಮೋಹಕ ಶಕ್ತಿ ನಮ್ಮನ್ನು ಆವರಿಸುತ್ತದೆ. ಎಲ್ಲಾ ರಸಗಳಿಗೆ ಒಗ್ಗುವ ಕಂಠ. ಇವರಲ್ಲಿ ಪ್ರಸಂಗದ ಸಾಹಿತ್ಯಗಳಿಗೆ ಮಾನ. ಅನಾವಶ್ಯಕವಾಗಿ ಅಕ್ಷರಗಳನ್ನು ಲಂಬಿಸುವ, ಸಾಹಿತ್ಯ ಲೋಪ ಇಲ್ಲ. ರಂಗದಲ್ಲಿರುವಷ್ಟೂ ಹೊತ್ತು ತಾನು ಭಾಗವತ ಎಂಬ ಪ್ರಜ್ಞೆ ಜಾಗೃತ. ರಂಗದಲ್ಲಿ ಪಾತ್ರವು ಸೊರಗಿ ದಾಗ ಸನ್ನಿವೇಶವನ್ನು ಕುಂಠಿತಗೊಳಿಸುವ, ವಿಜೃಂಭಿಸಿದಾಗ ಲಂಬಿಸು ವಂತೆ ಮಾಡುವ ರಂಗನಿರ್ದೇಶಕ. ನಿಜಾರ್ಥದಲ್ಲಿ ಒಂದನೇ ವೇಷಧಾರಿ.

ಹಿರಿಯ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರೊಡನೆ
""ಯಕ್ಷಗಾನದ ಶಿಸ್ತನ್ನು ಎಲ್ಲಿಯೂ ಮೀರದೆ ನಗುನಗುತ್ತಾ ಅನುಭವಿಸುತ್ತಾ ಅವರು ಹಾಡುವ ರೀತಿ ಅಷ್ಟು ಚಂದ ಮತ್ತು ಅಂದ', ಹಿರಿಯ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರು ಹೊಳ್ಳರ ರಂಗಕಸುಬನ್ನು ಬಣ್ಣಿಸುತ್ತಾರೆ. ಆಧುನಿಕ ಪ್ರೇಕ್ಷಕ ವರ್ಗದ ಆಸಕ್ತಿಯನ್ನು ಗೌರವಿಸುತ್ತಾ, ಯಕ್ಷಗಾನ ಚೌಕಟ್ಟನ್ನು ಮೀರದೆ, ಕಲಾವಿದರಿಗೆ ತೊಂದರೆಯಾಗದಂತೆ ಹಾಡಿ ಪ್ರದರ್ಶನಕ್ಕೆ ನ್ಯಾಯ ಒದಗಿಸುವ ಅವರ ಒಳಮನಸ್ಸು ಸದಾ ಎಚ್ಚರದಲ್ಲಿರುತ್ತದೆ.

ಬಹುತೇಕ ಎಲ್ಲಾ ಭಾಗವತರು ಮೆಚ್ಚುವ ಭಾಗವತ. ದ್ವಂದ್ವ ಹಾಡುಗಾರಿಕೆಗೆ ಒಗ್ಗುವ ಶಾರೀರ. ಸಹ ಕಲಾವಿದನನ್ನು ಶೋಷಿಸದ ಜಾಯಮಾನ. ಎಷ್ಟೋ ಸಲ ವಿಕ್ಷಿಪ್ತವಾಗಿ ಕಾಣುತ್ತಾರೆ. ತಮ್ಮಷ್ಟಕ್ಕೆ ತಾವಿದ್ದುಕೊಳ್ಳುವ ಗುಣ. ಅನಾವಶ್ಯಕವಾಗಿ ಹೆಚ್ಚು ತೆರೆದುಕೊಳ್ಳರು. ಒಮ್ಮೆ ತೆರೆದುಕೊಂಡ ಸ್ನೇಹ ಮತ್ತೆಂದೂ ಮುಚ್ಚಿಕೊಳ್ಳದು. ಮೇಲ್ನೋಟಕ್ಕೆ ಬಿಗುವಾಗಿ ಕಾಣಿಸಿಕೊಳ್ಳುವ ಹೊಳ್ಳರು ಬೀಗಿದ್ದು ಕಡಿಮೆ. ಬೀಗಿದಂತೆ ಕಾಣುವುದು ಸ್ವ-ಭಾವ.

ಕೆಲವೊಂದು ಪೌರಾಣಿಕ ಪ್ರಸಂಗಳನ್ನು ನೆನಪಿಸಿಕೊಂಡರೆ ಬಲಿಪ ನಾರಾಯಣ ಭಾಗವತರು, ಪದ್ಯಾಣ ಗಣಪತಿ ಭಟ್‌, ದಿನೇಶ ಅಮ್ಮಣ್ಣಾಯರು... ಹೇಗೆ ನೆನಪಾಗುತ್ತಾರೋ, ಅದೇ ರೀತಿ ಧರ್ಮಸ್ಥಳ ಮೇಳವು ಆಡಿ ಇತಿಹಾಸ ನಿರ್ಮಿಸಿದ ಕಾಯಕಲ್ಪ, ತ್ರಿಪುರ ಮಥನ, ರಂಭಾ ರೂಪರೇಖಾ, ಸಹಸ್ರಕವಚ ಮೋಕ್ಷ, ಚಕ್ರೇಶ್ವರ ಪರೀಕ್ಷಿತ, ಮಹಾಬ್ರಾಹ್ಮಣ... ಮೊದಲಾದ ಪ್ರಸಂಗಗಳ ಹಿಂದೆ ಹೊಳ್ಳರ ಹೆಸರು ಅಜ್ಞಾತವಾಗಿ ಮಿಳಿತವಾಗಿದೆ.

ಪದ್ಯಾಣ ಗಣಪತಿ ಭಟ್‌, ದಿನೇಶ ಅಮ್ಮಣ್ಣಾಯ , ಪುತ್ತಿಗೆ ರಘುರಾಮ ಹೊಳ್ಳ
ಆಂಗ್ಲ, ಹಿಂದಿ, ಸಂಸ್ಕೃತ ಭಾಷೆಯ ಪ್ರಸಂಗಗಳನ್ನು ಹಾಡಿದ್ದಾರೆ. ಯಕ್ಷ ಮಂಜೂಷಾ ತಂಡದೊಂದಿಗೆ ಕಡಲಾಚೆ ಹಾರಿದ್ದಾರೆ. ಅಭಿಮಾನಿಗಳನ್ನು ಪಡೆದಿದ್ದಾರೆ. ಮಾನ-ಸಮ್ಮಾನಗಳು ಪ್ರಾಪ್ತವಾಗಿವೆ. ""ಕಲಾವಿದನಿಗೆ ಜನರ ಪ್ರೀತಿ-ಅಭಿಮಾನವೇ ಪ್ರಶಸ್ತಿ. ಯಕ್ಷಗಾನವು ಒಪ್ಪುವಂತೆ ರಂಗದಲ್ಲಿ ವ್ಯವಸಾಯ ಮಾಡುವುದೇ ದೊಡ್ಡ ಪ್ರಶಸ್ತಿ', ಎಂದು ಹೊಳ್ಳರೊಮ್ಮೆ ಹೇಳಿದ ಮಾತು ಮರೆಯುವಂತಹುದಲ್ಲ.

ಸುಮಾರು ನಾಲ್ಕು ದಶಕಗಳ ಯಕ್ಷಗಾನ ನಂಟು. ಹೊಗಳಿಕೆಗೆ ಮಣೆ ಹಾಕದೆ, ಟೀಕೆಗಳಿಗೆ ಕುಗ್ಗದೆ, ವಿಮರ್ಶೆಗಳನ್ನು ಸವಾಲಾಗಿ ಸ್ವೀಕರಿಸುವ, ಅಭಿಪ್ರಾಯಗಳನ್ನು ಗೌರವಿಸುವ ಪುತ್ತಿಗೆ ರಘುರಾಮ ಹೊಳ್ಳರು ನಮ್ಮ ನಡುವಿನ ಆಪ್ತ ಭಾಗವತ. ಪ್ರಸ್ತುತ ಮಂಗಳೂರಿನಲ್ಲಿ ವಾಸ. ಮಡದಿ ವಾಣಿ. ಶ್ರೀಲಕ್ಷ್ಮೀ, ಶ್ರೀವಿದ್ಯಾ ಪುತ್ರಿಯರು.

ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ರಂಗ ಬದುಕನ್ನು ಕೃತಿಯ ಮೂಲಕ ದಾಖಲಿಸುವ, ಬೌದ್ಧಿಕ ಗಟ್ಟಿತನವನ್ನು ಅನಾವರಣಗೊಳಿಸುವ, ಸಾಗಿ ಬಂದ ಪಥವನ್ನು ತಿರುಗಿ ನೋಡುವ, ಅದಕ್ಕೆ ಕಾರಣರಾದವರನ್ನು ಗೌರವಿಸುವ ಅಪರೂಪದ ರಘುರಾಮಾಭಿನಂದನಮ್‌ ಸಮಾರಂಭವು ಇಂದಿನಿಂದ ಜು.7ರ ತನಕ ಮಂಗಳೂರು ಪುರಭವನದಲ್ಲಿ ಜರುಗಲಿದೆ.

ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ